ರಕ್ಷಿತ್ ಶೆಟ್ಟಿ ರುಕ್ಮಿಣಿ ವಸಂತ್ ಪ್ರದಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ `ಸಪ್ತಸಾಗರದಾಚೆ ಎಲ್ಲೋ` ಚಿತ್ರ ಇದೇ ಶುಕ್ರವಾರ ಅದ್ದೂರಿಯಾಗಿ ತೆರೆಕಾಣುತ್ತಿದೆ. ಗೋಧಿಬಣ್ಣ ಖ್ಯಾತಿಯ ಹೇಮಂತ್ ಎಂ.ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ಗೆ ಸಿನಿರಸಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದ ಪ್ರಥಮ ಭಾಗ ಸೆಪ್ಟೆಂಬರ್ ಒಂದರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರು ಮನು ಅಲಿಯಾಸ್ ರಾಜೇಂದ್ರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ಜೋಡಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಒಂದು ಗಾಢವಾದ ಒಂದು ಲವ್ಸ್ಟೋರಿಯನ್ನು ಒಳಗೊಂಡಿದೆ ಎನ್ನುವುದಕ್ಕೆ ಟ್ರೈಲರ್ನಲ್ಲಿ ಒಂದಷ್ಟು ಸುಳಿವೂ ಸಿಕ್ಕಿದೆ.
ಈ ಚಿತ್ರದ ಹಾಡುಗಳಿಗೆ ಚರಣ್ರಾಜ್ ಸಂಗೀತ ಸಂಯೋಜನೆ ಮಾಡಿದರೆ, ಅದ್ವೈತ ಗುರುಮೂರ್ತಿ ಕ್ಯಾಮೆರಾ ಹಿಡಿದಿದ್ದಾರೆ.777 ಚಾರ್ಲಿಯಂಥ ಹಿಟ್ ಸಿನಿಮಾ ನೀಡಿದ ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಹೇಮಂತ್ರಾವ್ ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ಟ್ರೈಲರ್ನಲ್ಲಿರುವ ಕಂಟೆಂಟ್ ಸಿನಿರಸಿಕರಿಗೆ ತುಂಬಾನೇ ಇಷ್ಟವಾಗಿದೆ, ರಿಲೀಸಾದ ಕೆಲವೇ ದಿನಗಳಲ್ಲಿ 5.8 ಮಿಲಿಯನ್ಗೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.
ಅಲ್ಲದೆ ಚಿತ್ರದ ಟೈಟಲ್ ಟ್ರ್ಯಾಕ್ ನೋಡಿ ಮೆಚ್ಚಿಕೊಂಡವರ ಸಂಖ್ಯೆ 4.5 ಮಿಲಿಯನ್ ದಾಟಿಹೋಗಿದೆ, ಚಿತ್ರದ ವಿಶೇಷತೆಗಳ ಕುರಿತಂತೆ ನಿರ್ದೇಶಕ ಹೇಮಂತ್ ಎಂ.ರಾವ್ ಮಾತನಾಡುತ್ತ ಇದೊಂದು ಇನ್ಟೆನ್ಸ್ ಲವ್ ಸ್ಟೋರಿ, ರಕ್ಷಿತ್ ಶೆಟ್ಟಿ ಅವರು ಹಿಂದೆಂದೂ ಈ ಥರದ ಪಾತ್ರವನ್ನು ಮಾಡಿಲ್ಲ, ಮನು ಹಾಗೂ ಪ್ರಿಯಾ ಎಂಬ ಎರಡು ಪಾತ್ರಗಳ ಸುತ್ತ ನಡೆಯುವ ಕಥೆ, ಚಿತ್ರದಲ್ಲಿ ಈ ಪಾತ್ರಗಳು ಪ್ರತಿ ಹಂತದಲ್ಲೂ ಎಮೋಷನ್ ಕ್ಯಾರಿ ಮಾಡಿಕೊಂಡು ಸಾಗುತ್ತವೆ, ಬೇರೆ ರೀತಿಯ ಎಮೋಷನಲ್ ಕ್ಯಾರೆಕ್ಟರ್ನ್ನು ರಕ್ಷಿತ್ ಶೆಟ್ಟಿ ಅವರಿಲ್ಲಿ ನಿರ್ವಹಿಸಿದ್ದಾರೆ, ಅದು ಚಿತ್ರ ನೋಡುವ ಪ್ರತಿಯೊಬ್ಬರಿಗೂ ಸಹ ಇಷ್ಟವಾಗುತ್ತದೆ. ಸುಮಾರು 120 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ, ಅಲ್ಲದೆ ಈಗಾಗಲೇ ಚಿತ್ರದ ಪ್ರಚಾರ ಭರದಿಂದ ನಡೆಯುತ್ತಿದೆ, ಪ್ರೇಕ್ಷಕರೂ ಸಹ ನಮ್ಮ ಚಿತ್ರದ ಬಿಡುಗಡೆಯನ್ನು ಕುತೂಹಲದಿಂದಲೇ ಕಾಯುತ್ತಿದ್ದಾರೆ.
ಇದು ಎರಡು ಕಾಲಘಟ್ಟಗಳಲ್ಲಿ ನಡೆಯುವ ಕಥೆಯಾಗಿದ್ದು, ನಾಯಕ ಮನು ಪಾತ್ರಕ್ಕೆ ಎರಡು ಶೇಡ್ಗಳಿರುತ್ತದೆ. ದಂಪತಿಯ ಮಧ್ಯೆ ನಡೆಯುವ ಎಮೋಷನಲ್ ಜರ್ನಿಯನ್ನು ಈ ಚಿತ್ರ ಒಳಗೊಂಡಿದೆ. ನಟನೆಯ ಜೊತೆಗೆ ರಕ್ಷಿತ್ ಶೆಟ್ಟಿ ಅವರೇ ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಚಿತ್ರಗಳನ್ನು ಪರಂವಃ ಪಿಕ್ಚರ್ಸ್ ಬ್ಯಾನರ್ ಮೂಲಕ ನಿರ್ಮಿಸಿದ್ದಾರೆ.
ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆ.ವಿ.ಎನ್. ಪ್ರೊಡಕ್ಷನ್ಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
ಹೇಮಂತ್ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಉಳಿದ ಪಾತ್ರಗಳಲ್ಲಿ ಚೈತ್ರಾಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ಕುಮಾರ್, ಪವಿತ್ರಾ ಲೋಕೇಶ್, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ.